ಶಿರಸಿ: ಇತ್ತೀಚೆಗೆ ಮುಂಡಗನಮನೆ ಸೊಸೈಟಿಯ ಸಭಾಭವನದಲ್ಲಿ ಹೆಸ್ಕಾಂ ಶಿರಸಿ ಹಾಗೂ ವಿದ್ಯುತ್ ಗ್ರಾಹಕರ ಸಮನ್ವಯ ಸಭೆಯನ್ನು ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದವರು ಏರ್ಪಡಿಸಿದ್ದರು.
ಸಭೆಯಲ್ಲಿ ಸ್ವಾಗತಿಸಿದ ಮುಖ್ಯಕಾರ್ಯನಿರ್ವಾಹಕ ನಾಗಪತಿ ವಿನಾಯಕ ಭಟ್ ಈ ಸಭೆಯು ಇಲಾಖೆಯ ಹಾಗೂ ಗ್ರಾಹಕರ ಸಮಸ್ಯೆಯ ವಿಷಯದ ಬಗ್ಗೆ ಇದ್ದರೂ ಇದನ್ನು ನಮ್ಮ ಸಂಘವೇ ಆಯೋಜಿಸಿದ್ದರ ಬಗ್ಗೆ ವಿವರಣೆ ನೀಡಿ ಸ್ವಾಗತಿಸಿದರು.
ಹೆಸ್ಕಾಂನ ಸಂಪಖಂಡ ವಿಭಾಗದ ಸೆಕ್ಷನ್ ಆಫೀಸರ್ ಮಂಜುನಾಥ್, ಈ ಭಾಗದ ವಿದ್ಯುತ್ ನೀಡುವಲ್ಲಿ ಏನೇನು ಸಮಸ್ಯೆಗಳು ಉದ್ಭವವಾಗುತ್ತಿದೆ. ಅದನ್ನು ಹೇಗೆ ಬಗೆಹರಿಸುತ್ತೇವೆಂದು ವಿವರಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಗ್ರಾಹಕರು ಕಳೆದವರ್ಷ ಯಾವ-ಯಾವ ರೀತಿಯಲ್ಲಿ ವಿದ್ಯುತ್ ಸಂಪರ್ಕ ನೀಡುವಲ್ಲಿ ಸಮಸ್ಯೆಗಳಿದ್ದವು, ಅವು ಈಗಲೂ ಮುಂದುವರಿದಿದೆ. ಅರ್ಥಾತ್ ಈ ಸಮಸ್ಯೆಗಳನ್ನು ಹೆಸ್ಕಾಂನವರು ಬಗೆಹರಿಸುವ ಪ್ರಯತ್ನ ಮಾಡಲಿಲ್ಲವೆಂದು ದೂರಿದರು.
ಸಭಾಧ್ಯಕ್ಷತೆ ವಹಿಸಿದ್ದ ಗೋಪಾಲಕೃಷ್ಣ ವೈದ್ಯ ಹೆಸ್ಕಾಂ ಸಮಸ್ಯೆ ಬಗ್ಗೆ ಸಹಕಾರಿ ಸಂಘದವರು ಮುತುವರ್ಜಿವಹಿಸಿ ಸಭೆಯನ್ನು ಏಕೆ ಕರೆದಿದ್ದೇವೆಂದರೆ, ನಾವು ಸಹಕಾರಿ ತತ್ವದಂತೆ ನಡೆಯುತ್ತಿದ್ದು, ಸಾಮಾಜಿಕ ಕಳಕಳಿಯು ಈ ತತ್ವಗಳಲ್ಲಿ ಒಂದಾಗಿದೆ. ಹಾಗಾಗಿ ಈ ತತ್ವದಂತೆ ಸದಸ್ಯರ ಪರವಾಗಿ ಈ ಕುಂದು ಕೊರತೆ ನಿವಾರಣೆಗೆ ಸಭೆಯನ್ನು ಕರೆಯಲಾಗಿದೆ. ಅಲ್ಲದೇ ಈ ರೀತಿ ಕಳಕಳಿಯಿಂದಲೇ ನಮ್ಮ ಭಾಗದಲ್ಲಿ ಕರ್ತವ್ಯನಿರತರಾದ ಲೈನ್ಮನ್ಗಳಿಗೆ ಪ್ರತಿವರ್ಷವೂ ರೈನ್ಕೋಟ್ಗಳನ್ನು ನೀಡುತ್ತಿದ್ದೇವೆ. ಈ ವರ್ಷವೂ ನೀಡುವ ರೈನ್ಕೋಟ್ಗಳನ್ನು ಸ್ವೀಕರಿಸಿ ಎಂದು ಹೆಸ್ಕಾಂ ಅಧಿಕಾರಿಗಳ ಮೂಲಕ ಕಿಟ್ ನೀಡಿದರು. ಜನರ ಪರವಾಗಿ ಮನವಿಯನ್ನು ವಿ.ಆರ್. ಹೆಗಡೆ ವಾಚಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಹೆಗಡೆ, ಬೆಳೆಸಿರಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶ್ರೀಪಾದ ಪಾಟೀಲ ಇದ್ದರು. ಹಾಗೂ ಈ ಭಾಗದ ಹಲವಾರು ಗ್ರಾಹಕರು ಸಭೆಯಲ್ಲಿ ಉಪಸ್ಥಿತರಿದ್ದರು.